BANTWAL
ದೋಸ್ತಿ ಸರಕಾರಕ್ಕೆ ದೇವಸ್ಥಾನದ ಹುಂಡಿ ಮಾತ್ರ ಕಾಣಿಸುತ್ತಿದೆ – ಕಲ್ಲಡ್ಕ ಪ್ರಭಾಕರ್ ಭಟ್
ದೋಸ್ತಿ ಸರಕಾರಕ್ಕೆ ದೇವಸ್ಥಾನದ ಹುಂಡಿ ಮಾತ್ರ ಕಾಣಿಸುತ್ತಿದೆ – ಕಲ್ಲಡ್ಕ ಪ್ರಭಾಕರ್ ಭಟ್
ಬಂಟ್ವಾಳ ಸೆಪ್ಟೆಂಬರ್ 28: ಪ್ರಾಕೃತಿಕ ವಿಕೋಪಕ್ಕೆ ಮುಜರಾಯಿ ದೇವಸ್ಥಾನಗಳ ಹುಂಡಿ ಹಣ ಬಳಸುತ್ತಿರುವುದಕ್ಕೆ ಆರ್ ಎಸ್ ಎಸ್ ಮುಖಂಡ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಳದಿಂದ ಬರುತ್ತಿದ್ದ ಹಣಕಾಸು ನೆರವನ್ನು ಸ್ಥಗಿತಗೊಳಿಸಿದ್ದ ಸರಕಾರ ಈಗ ಮಾತ್ರ ಪ್ರಾಕೃತಿಕ ವಿಕೋಪ ಸಂದರ್ಭ ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹಗೊಂಡ ದುಡ್ಡನ್ನು ಸರಕಾರ ತನ್ನ ಖಾತೆಗೆ ವರ್ಗಾಯಿಸಿಕೊಳ್ಳುವ ದ್ವಂದ್ವ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರಕ್ಕೆ ವಿಪತ್ತುಗಳು ಬಂದಾಗ ಮಾತ್ರ ಹಿಂದೂಗಳು ನೆನಪಾಗುತ್ತಾರೆ. ಹಿಂದೂ ದೇವಸ್ಥಾನಗಳ ಹುಂಡಿಯ ಹಣ ಮಾತ್ರ ತೆಗೆದುಕೊಳ್ಳುತ್ತಾರೆ. ಮಸೀದಿ, ಚರ್ಚ್ ಗಳಿಂದ ಯಾಕೆ ಪಡೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ದೇವಸ್ಥಾನಗಳ ಹಣವನ್ನು ಲೂಟಿ ಮಾಡುವ ಪ್ರಯತ್ನವಿದು ಎಂದ ಭಟ್, ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸುತ್ತಿದೆ ಎಂದು ಹೇಳಿದ ಅವರು ದೇವಸ್ಥಾನಗಳಲ್ಲಿ ಸಂಗ್ರಹವಾದ ದುಡ್ಡನ್ನು ಪ್ರಾಕೃತಿಕ ವಿಕೋಪ ಉದ್ದೇಶಕ್ಕೆ ಬಳಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಆಕ್ಷೇಪವಿದೆ ಎಂದರು.
You must be logged in to post a comment Login