ಶಿಡ್ಲಘಟ್ಟದ KSRTC ಸಾರಿಗೆ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಶಾಲಾ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಶಾಲಾ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ, ಕಾಲೇಜು ಬಳಿ ನಿಲುಗಡೆ ಹಾಗೂ ಅಂತರಾಜ್ಯ ಬಸ್ಗಳಲ್ಲೂ ವಿದ್ಯಾರ್ಥಿಗಳ ಬಸ್ ಪಾಸನ್ನು ಸ್ವೀಕರಿಸುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಶಿಡ್ಲಘಟ್ಟದಿಂದ ಬೆಂಗಳೂರು ಸೇರಿದಂತೆ ಹಲವಾರು ನಗರ, ಪಟ್ಟಣಗಳಿಗೆ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜು ವಸತಿ ನಿಲಯಗಳಿಗೆ ತೆರಳುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಜತೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ಗಳ ವ್ಯವಸ್ಥೆ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿದ್ದರೂ ಖಾಸಗಿ ಬಸ್ಗಳಿಗೆ ಮೊರೆ ಹೋಗಬೇಕಾಗಿದೆ. ಸಮಯಕ್ಕೆ ಸರಿಯಾಗಿ ಹೋಗಲೂ ಆಗುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.
ಶಿಡ್ಲಘಟ್ಟದಿಂದ ವಿಜಯಪುರ ದೇವನಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಸಾರಿಗೆ ಬಸ್ಗಳು ದೇವನಹಳ್ಳಿ ಬಳಿ ಸರ್ಕಾರಿ ಆಸ್ಪತ್ರೆ, ಪದವಿ ಕಾಲೇಜು ಇದ್ದರೂ ಅಲ್ಲಿ ನಿಲುಗಡೆ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ದೇವನಹಳ್ಳಿಯಲ್ಲಿ ಇಳಿದುಕೊಂಡು ಅಲ್ಲಿಂದ ಆಟೋದಲ್ಲಿ ನೂರು ರೂಪಾಯಿ ಹಣ ಕೊಟ್ಟು ಬರಬೇಕು ಇಲ್ಲವೇ ಮತ್ತೊಂದು ಬಸ್ ಹತ್ತಿ ವಾಪಸ್ ಬಂದು ಇಳಿದುಕೊಳ್ಳಬೇಕಿದೆ ಎಂದರು.
ಅಂತರ ರಾಜ್ಯ ಬಸ್ಗಳಲ್ಲಿ ಬಸ್ ಪಾಸ್ ಇರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದೆ ಇಲ್ಲ. ಬಲವಂತದಿಂದ ಹೊರಗಡೆ ತಳ್ಳುತ್ತಾರೆ, ಅಪಮಾನ ಮಾಡುತ್ತಾರೆ ಎಂದು ಆರೋಪಿಸಿದರು.
ಕೊರೊನಾ ಲಾಕ್ಡೌನ್ನಲ್ಲಿ ನಿಲ್ಲಿಸಿದ ಬಸ್ಗಳನ್ನು ಇದೀಗ ಲಾಕ್ಡೌನ್ ತೆರವುಗೊಳಿಸಿದ ನಂತರವೂ ಇನ್ನೂ ಚಾಲನೆ ನೀಡಿಲ್ಲ. ಹಾಗಾಗಿ ಇರುವ ಒಂದೆರಡು ಬಸ್ಗಳಲ್ಲಿ ನೂರಾರು ವಿದ್ಯಾರ್ಥಿಗಳನ್ನು ಕುರಿಗಳನ್ನು ತುಂಬುವಂತೆ ತುಂಬಲಾಗುತ್ತಿದೆ.
ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಖ್ಯೆಗಳನ್ನು ಹೆಚ್ಚಿಸಬೇಕು ಮತ್ತು ಶಾಲಾ ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್ ಸಂಚಾರವನ್ನು ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ರಸ್ತೆ ತಡೆಯಿಂದ ರಾಷ್ಟ್ರೀಯ ಹೆದ್ದಾರಿ-234 ರಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಸಂಚಾರಿಗಳು ಪರದಾಡುವಂತಾಯಿತು.
ಸಾರಿಗೆ ಸಂಸ್ಥೆಯ ಚಿಂತಾಮಣಿ ಘಟಕದ ನಿರ್ದೆಶಕ ಅಪ್ಪಿರೆಡ್ಡಿ, ಮಾಸಪ್ಪ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ 15 ದಿನಗಳ ಕಾಲಾವಕಾಶ ಕೇಳಿದರು. ಅಷ್ಟರಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ಎನ್ಎಸ್ಯುಐನ ರಾಜ್ಯ ಮಾಜಿ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಪ್ರಸನ್ನ, ಆಫ್ರಿದಿ, ಸಂತೋಷ್, ನವೀನ್, ಅಂಬರೀಷ್, ವೆಂಕಟೇಶ್, ಅಜಯ್, ಶ್ರೇಯಸ್, ಎನ್ಸಿಸಿ ವಿದ್ಯಾರ್ಥಿಗಳಾದ ನವೀನ್ ಕುಮಾರ್, ಚಂದನ್, ಅಭಿಲಾಷ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.