ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ನಾನು ನಿನ್ನೆ ಸಾಯಂಕಾಲ (೨೯-೭-೨೦೧೯) ರಾಜೀನಾಮೆ ನೀಡಿದ್ದೇನೆ. ಇದರ ಉದ್ದೇಶ: ಯಾವುದೇ ಒಂದು ಹೊಸ ಸರ್ಕಾರ ಬಂದಾಕ್ಷಣ ಅಕಾಡೆಮಿ,ನಿಗಮ ಮಂಡಳಿಗಳ ಅಧ್ಯಕ್ಷರ ರಾಜೀನಾಮೆಯನ್ನು ಕೇಳುವುದು ಅಥವಾ ರದ್ದು ಗೊಳಿಸುವುದು ಸಮರ್ಥನೀಯವಲ್ಲದ ಒಂದು ನಡೆ,ಇದು ಪದ್ಧತಿಯಂತೆ ನಡೆದುಕೊಂಡು ಬರುತ್ತಿದೆ. ಇದು ನನಗೆ ‘ನಿಮ್ಮ ಅಗತ್ಯ ನಮಗಿಲ್ಲ,ಹೊರಡಿ’ ಎನ್ನುವಂತೆ ಧ್ವನಿಸುವಂತಹದ್ದು.ಹೀಗಾಗಿ ಹೊಸ ಸರ್ಕಾರ ರಾಜೀನಾಮೆ ಕೇಳುವ ಮುನ್ನ ಗೌರವಯುತವಾಗಿ ತೆರಳುವುದು ಸೂಕ್ತ ಎನಿಸಿ ರಾಜೀನಾಮೆ ನೀಡಿದ್ದೇನೆ.ಇದಲ್ಲದೇ ಪೂರಕ ಕಾರಣಗಳೂ ಇವೆ. ನಾನು ಯಾವುದೇ ರಾಜಕೀಯ ಪಕ್ಷದ ವಕ್ತಾರನೂ ಅಲ್ಲ ಕಾರ್ಯಕರ್ತನೂ ಅಲ್ಲ. ನನಗೆ ನನ್ನವೇ ಆದ ತಾತ್ವಿಕ ನಿಲುವುಗಳಿವೆ.
ಆಗಸ್ಟ್ ೧, ೨ ಮತ್ತು ೩ ರಂದು ನಡೆಯಬೇಕಿದ್ದ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆಯ “ಸೀಮಾತೀತ ಸಾಹಿತ್ಯ ಪರ್ಬ” ಸಮಾವೇಶ ಮುಗಿಯುವ ಮುನ್ನವೇ ರಾಜೀನಾಮೆ ನೀಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಸಮಾವೇಶದಲ್ಲಿ ಭಾಗವಹಿಸಬೇಕಿದ್ದ ಸಂಶೋಧಕರು, ಅಧ್ಯಾಪಕರು, ಗಣ್ಯ-ತಜ್ಞರು ಹಾಗೂ ಸಾಹಿತ್ಯಾಸಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದುದರಿಂದ ಅದನ್ನು ಪರಿಹರಿಸಲು ತಕ್ಷಣದ ನಿರ್ಧಾರವೂ ಅನಿವಾರ್ಯವಾಗಿತ್ತು. ಹೀಗಿದ್ದಾಗಲೂ ತಮಗಾದ ಅನಾನುಕೂಲಕ್ಕೆ ವಿಷಾದಿಸುತ್ತೇನೆ.
– ಅರವಿಂದ ಮಾಲಗತ್ತಿ
0 ಪ್ರತಿಕ್ರಿಯೆಗಳು